ಜೆರುಸಲೆಮ್‌ನ ಪವಿತ್ರ ಸಮಾಧಿಯ ದೇವಾಲಯ ಜೆರುಸಲೆಮ್‌ನ ಪವಿತ್ರ ಸಮಾಧಿಯ ದೇವಾಲಯ 

‘ಪ್ರಾರ್ಥನೆ ನಿಲ್ಲದೇ ನಿರಂತರವಾಗಿ ಮುಂದುವರಿಯುತ್ತಿದೆ’:ಪವಿತ್ರ ಭೂಮಿಯ ಪಾಲಕರು

ಮಧ್ಯಪ್ರಾಚ್ಯದಲ್ಲಿ ಹಿಂಸಾಚಾರ ತೀವ್ರಗೊಂಡಿರುವ ಈ ಸಂದರ್ಭದಲ್ಲಿ, ಪವಿತ್ರ ಭೂಮಿಯ ಪಾಲಕರು ವಿಶ್ವದಾದ್ಯಂತದ ಜನರನ್ನು ಆತ್ಮೀಯವಾಗಿ “ಯುದ್ಧ ಮತ್ತು ಹಿಂಸಾಚಾರ ನಿಲ್ಲಲಿ; ಸಂವಾದ, ರಾಜತಾಂತ್ರಿಕತೆ ಮತ್ತು ರಾಜಕೀಯದ ದಾರಿಗಳು ಧೈರ್ಯ ಮತ್ತು ಜವಾಬ್ದಾರಿಯೊಂದಿಗೆ ನಡೆದುಕೊಳ್ಳಲಿ” ಎಂಬ ಮನವಿಯೊಂದಿಗೆ ಪ್ರಾರ್ಥನೆಯಲ್ಲಿ ಒಂದಾಗಲು ಆಹ್ವಾನಿಸುತ್ತಿದ್ದಾರೆ.

ವ್ಯಾಟಿಕನ್ ವರದಿ

ಭದ್ರತಾ ಕಾರಣಗಳಿಂದ ಜೆರೂಸಲೇಮಿನ ಪವಿತ್ರ ಸಮಾಧಿ ಬಸಿಲಿಕಾಗೆ ಪ್ರವೇಶ ನಿಯಮಿತವಾಗಿದ್ದರೂ, ಪವಿತ್ರ ಸ್ಥಳಗಳಲ್ಲಿ ಪ್ರಾರ್ಥನೆ ನಿರಂತರವಾಗಿ ನಡೆಯುತ್ತಲೇ ಇದೆ ಎಂದು ಪಾಲಕರು ತಿಳಿಸಿದ್ದಾರೆ.

ತಮ್ಮ ಪ್ರಕಟಣೆಯಲ್ಲಿ ಅವರು ತಿಳಿಸಿರುವಂತೆ, ಆಚರಣೆಗಳು, ವಿಧಿವಿಧಾನಗಳು, ದೈನಂದಿನ ಮೆರವಣಿಗೆಗಳು ಹಾಗೂ ಧಾರ್ಮಿಕ ಪ್ರಾರ್ಥನೆಗಳು “ಹಗಲಿರುಳು ಎಂದಿಗೂ ನಿಂತಿಲ್ಲ.”

ಹಿಂಸಾಚಾರದ ವಿರುದ್ಧ ಪ್ರಾರ್ಥನೆಯ ಕರೆ

“ವಿಮೋಚನೆಯ ಈ ಪವಿತ್ರ  ಸ್ಥಳಗಳಲ್ಲಿ, ನಮ್ಮ ಶತಮಾನಗಳ ಉಪಸ್ಥಿತಿ ಮತ್ತು ಪ್ರತಿದಿನ ಹೆಚ್ಚುತ್ತಲೇ ಇರುವ ಪ್ರಾರ್ಥನೆಯನ್ನು, ಸಮಸ್ತ ಧರ್ಮಸಭೆಯ ಪರವಾಗಿಯೂ ಹಾಗೂ ಸಂಪೂರ್ಣ ಮಾನವಕುಲದ ಹಿತಕ್ಕಾಗಿಯೂ ಸಲ್ಲಿಸಲಾಗುತ್ತಿದೆ,” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

“ನಾವು ಅನುಭವಿಸುತ್ತಿರುವ ಸಂಕಷ್ಟದ ಇಂತಹ ಗಂಭೀರ ಕ್ಷಣಗಳಲ್ಲಿ, ಈ ಉಪಸ್ಥಿತಿ ಮತ್ತು ಪ್ರಾರ್ಥನೆಗಳು ಪ್ರತಿಯೊಂದು ದೀಕ್ಷಾಸ್ನಾನ ಹೊಂದಿದ ವಿಶ್ವಾಸಿಯ ನಂಬಿಕೆ, ಭರವಸೆ ಮತ್ತು ಪ್ರಾರ್ಥನೆಗಳನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತವೆ; ಹೀಗಾಗಿ ಈ ಪವಿತ್ರ ಸ್ಥಳಗಳಿಂದ ಜನಾಂಗಗಳ ನಡುವೆ ಶಾಂತಿ ಮತ್ತು ಸೌಹಾರ್ದಕ್ಕಾಗಿ ಪ್ರಾರ್ಥನೆ ಮುಂದುವರಿಯುತ್ತಲೇ ಇರಲಿ.”

ಪವಿತ್ರ ವಾರದ ಆಚರಣೆಗಳು ನಡೆಯಲಿವೆಯೇ ಎಂಬ ಪ್ರಶ್ನೆಗೆ, ಪವಿತ್ರ ಭೂಮಿಯ ಪಾಲಕರ ಗುರುಗಳು, “ಈ ಸಮಯದಲ್ಲಿ ಭವಿಷ್ಯದ ಕುರಿತು ನಿಖರವಾಗಿ ಹೇಳುವುದು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.

ಪವಿತ್ರ ಭೂಮಿಯ ಪಾಲಕರು ಸಂಬಂಧಿತ ಅಧಿಕಾರಿಗಳೊಂದಿಗೆ ಮತ್ತು ಪವಿತ್ರ ಸಮಾಧಿಗೆ ಹೊಣೆಗಾರಿಕೆಯಲ್ಲಿರುವ ಇತರ ಧರ್ಮಸಭೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಆದ್ದರಿಂದ, ಯುದ್ಧ ಮತ್ತು ಹಿಂಸಾಚಾರ ನಿಲ್ಲಲೆಂದು, ಮತ್ತು ನ್ಯಾಯಯುತ ಹಾಗೂ ದೀರ್ಘಕಾಲಿಕ ಶಾಂತಿಯನ್ನು ನಿರ್ಮಿಸಲು ಸಾಧ್ಯವಾಗುವ ಏಕೈಕ ಮಾರ್ಗಗಳಾದ ಸಂವಾದ, ರಾಜತಾಂತ್ರಿಕತೆ ಮತ್ತು ರಾಜಕೀಯದ ದಾರಿಗಳು ಧೈರ್ಯ ಮತ್ತು ಜವಾಬ್ದಾರಿಯೊಂದಿಗೆ ನಡೆಯಲೆಂದು ಎಲ್ಲ ಭಕ್ತರನ್ನು ಪ್ರಾರ್ಥನೆಯಲ್ಲಿ ಒಂದಾಗಲು ಅವರು ಆಹ್ವಾನಿಸಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

21 ಮಾರ್ಚ್ 2026, 05:09