ಇಸ್ರಾಯೇಲ್ ಪೊಲೀಸರಿಂದ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಿಗೆ ಪವಿತ್ರ ಸಮಾಧಿ ದೇವಾಲಯ ಪ್ರವೇಶಕ್ಕೆ ತಡೆ
ವ್ಯಾಟಿಕನ್ ವರದಿ
ಜಂಟಿ ಪ್ರಕಟಣೆಯ ಪ್ರಕಾರ, ಗರಿಗಳ ಭಾನುವಾರದ ಬೆಳಿಗ್ಗೆ, ಜೆರುಸಲೇಮ್ನ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷ ಪ್ರಧಾನ ಗುರುಗಳಾದ ಪೂಜ್ಯ ಪಿಯರ್ಬತ್ತಿಸ್ತ ಪಿಜ್ಜಾಬಲ್ಲಾ ಹಾಗೂ ಪವಿತ್ರ ಭೂಮಿಯ ಪಾಲಕರಾದ ವಂ. ಗುರುಗಳಾದ ಫ್ರಾನ್ಸೆಸ್ಕೊ ಇಯೆಲ್ಪೊ (OFM), ಗರಿಗಳ ಭಾನುವಾರದ ಪವಿತ್ರ ಬಲಿಯನ್ನು ಆಚರಿಸಲು ಪವಿತ್ರ ಸಮಾಧಿ ದೇವಾಲಯದತ್ತ ತೆರಳುತ್ತಿದ್ದ ವೇಳೆ, ದೇವಾಲಯ ಪ್ರವೇಶವನ್ನು ತಡೆಯಲಾಯಿತು.
ಭಾನುವಾರ ಪ್ರಕಟವಾದ ಪ್ರಕಟಣೆಯ ಪ್ರಕಾರ, ಇಬ್ಬರು ಧಾರ್ಮಿಕ ಮುಖ್ಯಸ್ಥರನ್ನು ಇಸ್ರಾಯೇಲ್ ಪೊಲೀಸರು ಮಾರ್ಗ ಮಧ್ಯೆ ತಡೆದು, “ಯಾವುದೇ ಮೆರವಣಿಗೆ ಅಥವಾ ವಿಧಿವಿಧಾನದ ಲಕ್ಷಣಗಳಿಲ್ಲದೆ ಖಾಸಗಿಯಾಗಿ ಸಾಗುತ್ತಿದ್ದರೂ” ಹಿಂದಿರುಗುವಂತೆ ಒತ್ತಾಯಿಸಿದರು ಎಂದು ತಿಳಿಸಲಾಗಿದೆ.
“ಶತಮಾನಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಿಗೆ ಗರಿಗಳ ಭಾನುವಾರದ ಪವಿತ್ರ ಬಲಿಯನ್ನು ಪವಿತ್ರ ಸಮಾಧಿ ದೇವಾಲಯದಲ್ಲಿ ಆಚರಿಸಲು ಅವಕಾಶ ನಿರಾಕರಿಸಲಾಗಿದೆ,” ಎಂದು ಪ್ರಕಟಣೆ ಉಲ್ಲೇಖಿಸಿದೆ. ಈ ಘಟನೆ “ಗಂಭೀರ ಪೂರ್ವಾಪರ” ಎಂದು ಹೇಳಿ, ಈ ವಾರದಲ್ಲಿ ಜೆರುಸಲೇಮಿನತ್ತ ದೃಷ್ಟಿ ಹರಿಸುವ ವಿಶ್ವದ ಕೋಟ್ಯಾಂತರ ಭಕ್ತವಿಶ್ವಾಸಿಗಳ ಧಾರ್ಮಿಕ ಭಾವನೆಗಳನ್ನು ಲೆಕ್ಕಿಸದಂತಾಗಿದೆ ಎಂದು ತಿಳಿಸಲಾಗಿದೆ.
ನಿಯಮಗಳನ್ನು ಪಾಲಿಸಿದ್ದರೂ ತಡೆ
ಯುದ್ಧ ಆರಂಭವಾದುದರಿಂದಲೇ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರು ಮತ್ತು ಪವಿತ್ರ ಭೂಮಿಯ ಪಾಲಕರು ಇಬ್ಬರೂ ಸಂಪೂರ್ಣ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ ಎಂದು ಪ್ರಕಟಣೆ ಹೇಳುತ್ತದೆ. ಸಾರ್ವಜನಿಕ ಸಮಾವೇಶಗಳನ್ನು ರದ್ದುಪಡಿಸುವುದು, ಹಾಜರಾತಿಯನ್ನು ನಿಷೇಧಿಸುವುದು ಹಾಗೂ ಆಚರಣೆಗಳನ್ನು ವಿಶ್ವದಾದ್ಯಂತ ಪ್ರಸಾರ ಮಾಡುವ ವ್ಯವಸ್ಥೆ ಮಾಡುವುದು ಸೇರಿದಂತೆ ಎಲ್ಲಾ ನಿಯಮಗಳನ್ನು ಅವರು ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ.
ಪುನರುತ್ಥಾನದ ಈ ದಿನಗಳಲ್ಲಿ ವಿಶ್ವದ ಅನೇಕ ಭಕ್ತರು ಜೆರುಸಲೇಮಿನತ್ತ ಹಾಗೂ ಪವಿತ್ರ ಸಮಾಧಿ ದೇವಾಲಯದತ್ತ ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸುತ್ತಾರೆ ಎಂಬುದನ್ನೂ ಪ್ರಕಟಣೆ ಉಲ್ಲೇಖಿಸಿದೆ.
“ಅತಿರೇಕದ ಕ್ರಮ”
ಪ್ರಧಾನ ಗುರು ಪಿಯರ್ಬತ್ತಿಸ್ತ ಪಿಜ್ಜಾಬಲ್ಲಾ ಮತ್ತು ವಂ. ಗುರು ಫ್ರಾನ್ಸೆಸ್ಕೊ ಇಯೆಲ್ಪೊ ಅವರಿಗೆ ಪ್ರವೇಶ ನಿರಾಕರಿಸಿರುವುದು, ಕಥೋಲಿಕ ಧರ್ಮದ ಹಾಗೂ ಪವಿತ್ರ ಸ್ಥಳಗಳ ಮೇಲಿನ ಅತ್ಯುನ್ನತ ಧಾರ್ಮಿಕ ಜವಾಬ್ದಾರಿ ಹೊಂದಿರುವವರ ವಿರುದ್ಧವಾಗಿ, “ಸ್ಪಷ್ಟವಾಗಿ ಅಸಮಂಜಸ ಮತ್ತು ಅತಿಯಾದ ಅತಿರೇಕದ ಕ್ರಮವಾಗಿದೆ” ಎಂದು ಪ್ರಕಟಣೆ ಹೇಳುತ್ತದೆ.
ಜಂಟಿ ಪ್ರಕಟಣೆ ಮುಂದುವರಿದು, “ಈ ತುರ್ತು ಹಾಗೂ ಮೂಲತಃ ದೋಷಪೂರಿತ ನಿರ್ಧಾರವು ಅನರ್ಹ ಪರಿಗಣನೆಗಳಿಂದ ಪ್ರಭಾವಿತವಾಗಿದೆ; ಇದು ಯುಕ್ತಿ, ಆರಾಧನಾ ಸ್ವಾತಂತ್ರ್ಯ ಹಾಗೂ ಸ್ಥಿತಿಗತಿಯ ಗೌರವ ಎಂಬ ಮೂಲಭೂತ ತತ್ವಗಳಿಂದ ಸ್ಪಷ್ಟವಾಗಿ ದೂರವಾಗಿದೆ,” ಎಂದು ಉಲ್ಲೇಖಿಸಿದೆ. ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರು ಮತ್ತು ಪವಿತ್ರ ಭೂಮಿಯ ಪಾಲಕರು ಇಬ್ಬರೂ ಜೆರುಸಲೇಮ್ನಲ್ಲಿರುವ ಹಾಗೂ ವಿಶ್ವದಾದ್ಯಂತ ಇರುವ ಕ್ರೈಸ್ತ ಭಕ್ತರಿಗೆ ತಮ್ಮ “ಆಳವಾದ ವಿಷಾದವನ್ನು” ವ್ಯಕ್ತಪಡಿಸಿದ್ದಾರೆ. ಕ್ರೈಸ್ತ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ಈ ದಿನದಲ್ಲಿ ಪ್ರಾರ್ಥನೆ ನಡೆಸಲು ಸಾಧ್ಯವಾಗದಿರುವುದು ವಿಷಾದಕರವೆಂದು ಅವರು ತಿಳಿಸಿದ್ದಾರೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).