ಪ್ರಭುವಿನ ದಿನದ ಚಿಂತನೆ: ಗರಿಗಳು ಮತ್ತು ಕಥಾ ತಿರುವುಗಳು
ಲೇಖಕರು: ಜೆನ್ನಿ ಕ್ರಾಸ್ಕಾ
ಗರಿಗಳ ಭಾನುವಾರವು ನಮನ್ನು ಒಂದು ಗಂಭೀರ ರಹಸ್ಯದ ಅಂಚಿಗೆ ಕರೆದೊಯ್ಯುತ್ತದೆ. ನಾವು ಗರಿಗಳನ್ನು ಎತ್ತಿಕೊಂಡು ಜನಸಮೂಹದ ಘೋಷಣೆಯೊಂದಿಗೆ ಪ್ರತಿಧ್ವನಿಸುತ್ತಾ ““ದಾವೀದ ಪುತ್ರನಿಗೆ ಹೋಸಾನ್ನ!” ಎಂದು ಪವಿತ್ರ ವಾರದೊಳಗೆ ಪ್ರವೇಶಿಸುತ್ತೇವೆ. ಆದರೆ ಕ್ಷಣಾರ್ಧದಲ್ಲೇ, ಪೂಜಾ ಕ್ರಮವು ನಮ್ಮನ್ನು ಪಾಡಿನ ಗಂಭೀರ ವಾಚನದತ್ತ ಕರೆದೊಯ್ಯುತ್ತದೆ. ಕ್ರಿಸ್ತನನ್ನು ಕೊಂಡಾಡಿದ ಅದೇ ಧ್ವನಿಗಳು ಈಗ ಅವನ ವಿರುದ್ಧ ತಿರುಗುತ್ತವೆ. ಮೆರವಣಿಗೆಯ ಉಲ್ಲಾಸವು ಶಿಲುಬೆಯ ಭಾರದೊಳಗೆ ನಿಧಾನವಾಗಿ ಕರಗುತ್ತದೆ.
ಮತ್ತಾಯನ ಶುಭಸಂದೇಶದಲ್ಲಿನ ಪಾಡಿನ ವರ್ಣನೆಯಲ್ಲಿ, ನಾವು ಕೇವಲ ಕ್ರಿಸ್ತನ ನೋವನ್ನಷ್ಟೇ ಕಾಣುವುದಿಲ್ಲ; ಪ್ರತಿಯೊಂದು ಯುಗದಲ್ಲೂ ಹರಿಯುತ್ತಿರುವ ಮಾನವ ನೋವನ್ನೂ ಕಾಣುತ್ತೇವೆ. ದ್ರೋಹ, ಭಯ, ಅನ್ಯಾಯ, ಹಿಂಸೆ—ಇವು ಶುಭಸಂದೇಶದ ಪುಟಗಳಿಗೆ ಮಾತ್ರ ಸೀಮಿತವಾಗಿಲ್ಲ. ಅವು ಪ್ರತಿಯೊಂದು ಕಾಲದಲ್ಲೂ, ಪ್ರತಿಯೊಬ್ಬರ ಬದುಕಿನಲ್ಲೂ ಪುನರಾವರ್ತಿಸುತ್ತವೆ.
ಶಿಲುಬೆಯ ನೆರಳು ಕೇವಲ ಕಲ್ವಾರಿಯ ಮೇಲೆ ಮಾತ್ರವಲ್ಲ, ಇಂದಿನ ನಮ್ಮ ಲೋಕದ ಮೇಲೂ ಹರಡಿದೆ.
ಈ ನೆರಳನ್ನು ನಾವು ಇಂದಿನ ಸಂದರ್ಭದಲ್ಲೇ ತೀವ್ರವಾಗಿ ಅನುಭವಿಸುತ್ತಿದ್ದೇವೆ. ರಾಷ್ಟ್ರಗಳು ಮತ್ತೆ ಸಂಘರ್ಷದ ಅಂಚಿನಲ್ಲಿ ನಿಂತಿರುವಾಗ, ಮಧ್ಯಪೂರ್ವದಲ್ಲಿ ಯುದ್ಧದ ಭೀತಿ ಏಳುತ್ತಿರುವಾಗ, ನಮ್ಮ ಕಾಲದ ಅನಿಶ್ಚಿತತೆ ನಮ್ಮ ಮೇಲೆ ಭಾರವಾಗಿ ಒತ್ತಡ ಹಾಕುತ್ತಿದೆ. ಜನರ ನಡುವಿನ ವಿಭಜನೆ, ನಿರಪರಾಧಿಗಳ ನೋವು, ಮಾನವ ಅಹಂಕಾರ ಮತ್ತು ಅಧಿಕಾರದ ಬೆಲೆ—ಇವು ನಮ್ಮ ಮುಂದೆ ಸ್ಪಷ್ಟವಾಗಿ ಕಾಣಿಸುತ್ತಿವೆ. ಗೆತ್ಸೆಮನೆ ತೋಟದಲ್ಲಿ ಶಿಷ್ಯರು ಅನುಭವಿಸಿದ ಭಯದಂತೆ, ನಾವು ಸಹ ಭಯ, ಗೊಂದಲ ಮತ್ತು ಕೆಲವೊಮ್ಮೆ ನಿರಾಶೆಯ ಕಡೆ ಜಾರುವ ಸಾಧ್ಯತೆಯನ್ನು ಎದುರಿಸುತ್ತೇವೆ.
ಆದರೆ ಗರಿಗಳ ಭಾನುವಾರವು ನಮಗೆ ಸ್ಪಷ್ಟವಾಗಿ ‘ಕ್ರಿಸ್ತನು ಅಂಧಕಾರದಿಂದ ಹಿಂದೆ ಸರಿಯುವವನಲ್ಲ. ಅವನು ಅದರಲ್ಲಿ ಸಂಪೂರ್ಣವಾಗಿ ಪ್ರವೇಶಿಸುತ್ತಾನೆ’ ಎಂಬುದನ್ನು ನೆನಪಿಸುತ್ತದೆ. ಗೆತ್ಸೆಮನೆ ತೋಟದಲ್ಲಿ ಅವನು ನಡುಗುತ್ತಾನೆ. ಪಿಲಾತನ ಮುಂದೆ ಅವನು ಮೌನವಾಗಿ ನಿಂತಿರುತ್ತಾನೆ. ಶಿಲುಬೆಯ ಮೇಲೆ, ಅವನು ಕೈಬಿಡಲ್ಪಟ್ಟವನಾಗಿ ಕೂಗುತ್ತಾನೆ.
ಯೇಸು ನೋವನ್ನು ದೂರ ಮಾಡುವುದಿಲ್ಲ—ಅವರು ಅದನ್ನು ಅಪ್ಪಿಕೊಳ್ಳುತ್ತಾರೆ, ಪರಿವರ್ತಿಸುತ್ತಾರೆ ಮತ್ತು ವಿಮೋಚಿಸುತ್ತಾರೆ. ಇದೇ ನಮ್ಮ ನಂಬಿಕೆಯ ಹೃದಯ: ಶಿಲುಬೆ ನಿಜವಾಗಿದೆ. ಅದರ ಭಾರವನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ ಶಿಲುಬೆಯೇ ಅಂತ್ಯವಲ್ಲ.
ನಾವು ಪುನರುತ್ಥಾನದ ಜನರು. ಪವಿತ್ರ ವಾರದ ಆರಂಭದಲ್ಲಿ ನಿಂತಿರುವ ನಾವು, ಶಾಂತವಾದ ಆದರೆ ಅಚಲವಾದ ಭರವಸೆಯೊಂದಿಗೆ ಮುಂದೆ ಸಾಗುತ್ತೇವೆ. ಇತಿಹಾಸದ ಮೇಲೆ ನಿಂತಿರುವ ಶಿಲುಬೆ ಸೋಲಿನ ಸಂಕೇತವಲ್ಲ; ಅದು ಜಯದ ಸಂಕೇತ—ಬಲದಿಂದಲ್ಲ, ಪ್ರೀತಿ, ತ್ಯಾಗ ಮತ್ತು ಕರುಣೆಯಿಂದ ಸಾಧಿಸಲ್ಪಟ್ಟ ಜಯ.
ಅನಿಶ್ಚಿತತೆಯಿಂದ ತುಂಬಿರುವ ಈ ಜಗತ್ತಿನಲ್ಲಿ, ಈ ಸತ್ಯ ಇನ್ನಷ್ಟು ಮಹತ್ವ ಪಡೆಯುತ್ತದೆ. ಇದರ ಅರ್ಥ, ಯಾವುದೇ ನೋವು ವ್ಯರ್ಥವಲ್ಲ. ಯಾವುದೇ ಅಂಧಕಾರ ಅಂತ್ಯವಿಲ್ಲದದ್ದಲ್ಲ. ಯುದ್ಧ, ದ್ವೇಷ ಮತ್ತು ವಿಭಜನೆಯ ನಡುವೆ ಕೂಡ ದೇವರು ಕಾರ್ಯನಿರ್ವಹಿಸುತ್ತಾನೆ—ಮರಣದಿಂದ ಜೀವವನ್ನು ಹೊರತರುತ್ತಾನೆ.
ಗರಿಗಳ ಭಾನುವಾರವು ನಮಗೆ ಒಂದು ಆಹ್ವಾನ ನೀಡುತ್ತದೆ: ಕ್ರಿಸ್ತನೊಂದಿಗೆ ನಡೆಯಲು—ಜಯದ ಕ್ಷಣಗಳಲ್ಲಿ ಮಾತ್ರವಲ್ಲ, ಪರೀಕ್ಷೆಯ ಸಮಯದಲ್ಲಿಯೂ. ಜನರ ಧ್ವನಿಗಳು ಮೌನವಾಗುವಾಗ ನಿಷ್ಠೆಯಿಂದ ಉಳಿಯಲು, ಇತರರು ದೂರ ಸರಿಯುವಾಗ ಶಿಲುಬೆಯ ಬಳಿಯಲ್ಲಿ ನಿಲ್ಲಲು, ಮತ್ತು ನಾವು ಕಾಣದಿದ್ದರೂ ದೇವರ ಯೋಜನೆಗಳು ನಡೆಯುತ್ತಿವೆ ಎಂಬ ಭರವಸೆಯಲ್ಲಿ ಮುಂದೆ ಸಾಗಲು.
ಈ ಪವಿತ್ರ ವಾರದಲ್ಲಿ ಪ್ರವೇಶಿಸುವಾಗ, ನಾವು ಗರಿಗಳನ್ನೂ ಶಿಲುಬೆಯನ್ನೂ ನಮ್ಮ ಹೃದಯಗಳಲ್ಲಿ ಹೊತ್ತುಕೊಳ್ಳೋಣ. ನಮ್ಮ ಸುತ್ತಲಿನ ನೋವಿನಿಂದ ಹಿಂದೆ ಸರಿಯದೆ, ಅದನ್ನು ಕ್ರಿಸ್ತನ ಕರುಣೆಯೊಂದಿಗೆ ಎದುರಿಸೋಣ. ಎಲ್ಲಕ್ಕಿಂತ ಮುಖ್ಯವಾಗಿ, ನಮ್ಮ ನಂಬಿಕೆಯನ್ನು ನಿರ್ಧರಿಸುವ ಆ ವಾಗ್ದಾನವನ್ನು ಬಲವಾಗಿ ಹಿಡಿಯೋಣ:
ಶಿಲುಬೆ ಅಂತ್ಯವಲ್ಲ.
ಪ್ರೀತಿ ಮರಣಕ್ಕಿಂತ ಶಕ್ತಿಯುತ.
ಪುನರುತ್ಥಾನ ಬರುತ್ತಿದೆ!
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).