ಪವಿತ್ರ ಗ್ರಂಥದ ಹೆಜ್ಜೆಗಳಲ್ಲಿ: ಜೋರ್ಡನ್ ತೀರ್ಥಯಾತ್ರೆಯ ಪಾಡ್ ಕಾಸ್ಟ್
ವ್ಯಾಟಿಕನ್ ವರದಿ
ಯಾತ್ರೆ ಆರಂಭವಾಗವುದು ವಾಡಿ ರಮ್ ಮರುಭೂಮಿಯಲ್ಲಿ. ಬಂಡೆಗಳ ಮಧ್ಯೆ ಹರಡಿಕೊಂಡಿರುವ ಮರಳು, ಸೂರ್ಯಾಸ್ತದಲ್ಲಿ ಕೆಂಪು ಬಣ್ಣದ ಅದ್ಭುತ ಛಾಯೆಗಳನ್ನು ತಾಳುವ ದೃಶ್ಯ—ಇದು ಕೇವಲ ಪ್ರಕೃತಿ ಸೌಂದರ್ಯವಲ್ಲ, ಮನಸ್ಸನ್ನು ಒಳಗೆಳೆಯುವ ಒಂದು ಅನುಭವ. ಆದರೆ ಈ ಯಾತ್ರೆಯ ಆಳವಾದ ಅರ್ಥ, ಇಸ್ರಾಯೇಲ್ ಜನರು ನೆಬೋ ಪರ್ವತದತ್ತ ಸಾಗುವ ಮೊದಲು ದಾಟಿದ ಭೂಮಿಯಲ್ಲಿರುವುದಲ್ಲದೆ, ಆ ನೆಲಗಳಿಗೆ ಸಂಬಂಧಿಸಿದ ದೇವರ ವಾಕ್ಯವನ್ನು ಓದುತ್ತಾ, ಅದನ್ನು ತನ್ನ ಜೀವನದೊಂದಿಗೆ ಹೊಂದಿಸಿಕೊಳ್ಳುವಲ್ಲಿ ಅಡಕವಾಗಿದೆ.
ಈ ಪಾಡ್ಕಾಸ್ಟ್ ಕಲ್ಪನೆ ಯಾತ್ರಿಕರ ಈ ಆಳವಾದ ಅನುಭವದಿಂದಲೇ ಹುಟ್ಟಿಕೊಂಡಿದೆ. ಯಾತ್ರೆಯ ಪ್ರತಿಯೊಂದು ಹಂತವೂ ಪವಿತ್ರ ಗ್ರಂಥ, ಇತಿಹಾಸ, ಪುರಾತತ್ವ ಮತ್ತು ಧಾರ್ಮಿಕ ಬೋಧನೆಯೊಂದಿಗೆ ಜೋಡಿಸಿಕೊಂಡಿತ್ತು. ಇದಕ್ಕೆ ಮಾರ್ಗದರ್ಶನ ನೀಡಿದವರು ವಂ. ಗುರು ವೋಲ್ಟಾಜ್ಜಿಯೋ—ಸ್ಟುಡಿಯಂ ಬಿಬ್ಲಿಕಮ್ ಫ್ರಾನ್ಸಿಸ್ಕಾನಮ್ ಮತ್ತು ಸ್ಟುಡಿಯಂ ಥಿಯಾಲಾಜಿಕಮ್ ಗಲಿಲಾಯೇಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಜೆರೂಸಲೇಮಿನ ಡೋಮಸ್ ಬೆಥಾನಿಯೆ ಅಧ್ಯಯನ ಕೇಂದ್ರದ ನಿರ್ದೇಶಕರೂ ಆಗಿದ್ದಾರೆ.
ಈ ಪಾಡ್ಕಾಸ್ಟ್ನಲ್ಲಿ ಜೋರ್ಡನ್ನಲ್ಲಿ ವಾಸಿಸುವವರ ಧ್ವನಿಗಳೂ ಕೇಳಿಬರುತ್ತವೆ. ಜೋರ್ಡನ್ ಮತ್ತು ಸೈಪ್ರಸ್ನ ಪ್ರೇಷಿತ ಪ್ರತಿನಿಧಿಯಾದ ಮಹಾಧರ್ಮಗುರು ಜಿಯೋವನ್ನಿ ಪಿಯೆತ್ರೋ ದಾಲ್ ತೋಸೊ ಅವರ ಮಾತುಗಳೂ ಸೇರಿವೆ. ಪ್ರತಿ ಭಾಗದಲ್ಲೂ ಯಾತ್ರಿಕರ ಅನುಭವಗಳು ಜೀವಂತವಾಗಿ ಮೂಡಿಬರುತ್ತವೆ—ಪವಿತ್ರ ಗ್ರಂಥದ ವಾಸ್ತವಿಕತೆಯಲ್ಲಿ ಮುಳುಗಿದ ಅನುಭವ ಅವರ ನಂಬಿಕೆಯನ್ನು ಹೇಗೆ ಸ್ಪರ್ಶಿಸಿತು ಎಂಬುದನ್ನು ಅವರು ಹಂಚಿಕೊಳ್ಳುತ್ತಾರೆ.
“ಈ ಯಾತ್ರೆಯ ಹೃದಯವೇ ಕ್ರೈಸ್ತ ಆರಂಭಿಕ ಅನುಭವ,” ಎಂದುವಂ. ಗುರು ವೋಲ್ಟಾಜ್ಜಿಯೋ ಹೇಳುತ್ತಾರೆ. “ನಾಲ್ಕನೇ ಮತ್ತು ಐದನೇ ಶತಮಾನಗಳಲ್ಲಿ ಧರ್ಮಪಿತೃಗಳು, ಮರುಭೂಮಿಯಲ್ಲಿ ಇಸ್ರಾಯೇಲ್ ಜನರ ನಡೆಗಳನ್ನು ಆಧಾರವಾಗಿಟ್ಟುಕೊಂಡು ಕ್ರೈಸ್ತ ಜೀವನದ ಮಾರ್ಗವನ್ನು ರೂಪಿಸಿದರು. ಕ್ರೈಸ್ತೀಯ ಜೀವನ ಪಾಸ್ಕ ಯಾತ್ರೆಯಂತೆಯೇ.”
ಮರುಭೂಮಿ ಮತ್ತು ಹೃದಯ
ಮರುಭೂಮಿ—ನಮ್ಮ ಜೀವನದಲ್ಲೂ ಅನುಭವವಾಗುವ ಖಾಲಿತನದಂತೆ. ಆದರೆ ಅದೇ ಮೌನದ ಸ್ಥಳದಲ್ಲಿ ದೇವರು ಹೃದಯದೊಂದಿಗೆ ಮಾತಾಡುತ್ತಾನೆ. ವಾಡಿ ರಮ್ ಮತ್ತು ಪೆಟ್ರಾ ಪ್ರದೇಶಗಳು ಎದೋಮ್ ಪ್ರದೇಶಕ್ಕೆ ಸೇರಿದವು—ಏಸಾವ ಮತ್ತು ಯಾಕೋಬನ ಕಥೆಗಳಿಗೆ ಸಂಬಂಧಿಸಿದ ನೆಲ. ಈ ಕಥೆಗಳು ಯಾತ್ರಿಕರಿಗೆ ತಮ್ಮ ಸಂಬಂಧಗಳ ಬಗ್ಗೆ ಹೊಸದಾಗಿ ಯೋಚಿಸುವ ಅವಕಾಶ ನೀಡುತ್ತವೆ.
ಮೂರ್ತಿಪೂಜೆ ಮತ್ತು ಒಡಂಬಡಿಕೆ
ಯಾತ್ರೆ ಮೋವಾಬ್ ಪ್ರದೇಶದತ್ತ ಮುಂದುವರಿಯುತ್ತದೆ. ನೆಬೋ ಪರ್ವತದಲ್ಲಿ ಮೋಸೆಯು ವಾಗ್ದಾನಿತ ನಾಡನ್ನು ಕಂಡರೂ, ಪ್ರವೇಶಿಸಲು ಸಾಧ್ಯವಾಗಲಿಲ್ಲ. ಈ ಸ್ಥಳದ ಭವ್ಯ ದೃಶ್ಯಗಳು ಮೋಶೆಯ ಮತ್ತು ಇಸ್ರಾಯೇಲ್ ಜನರ ಕಥೆಯನ್ನು ಮತ್ತೆ ನೆನಪಿಗೆ ತರುತ್ತವೆ. ಫ್ರಾನ್ಸಿಸ್ಕನ್ ಸಭೆಗೆ ಸೇರಿದ ಮೌಂಟ್ ನೆಬೊದಲ್ಲಿರುವ ಮಠದ ಪೂರ್ವ ಪಾಲಕರೂ ಮತ್ತು ಈಗ ಸೈಪ್ರಸ್ನ ಲಿಮಾಸೋಲ್ನಲ್ಲಿ ಧರ್ಮಕೇಂದ್ರದ ಗುರುಗಳಾದ ವಂ. ಗುರು ಬರ್ನಾರ್ಡ್ ತಿಲಗರಾಜಾ, ಈ ಪ್ರದೇಶದಲ್ಲಿ ಉತ್ಖನನಗಳು ಹೇಗೆ ಪ್ರಾರಂಭವಾದವು ಎಂಬುದನ್ನು ಈ ಸಂಚಿಕೆಯಲ್ಲಿ ವಿವರಿಸುತ್ತಾರೆ.
ಹೋರಾಟ ಮತ್ತು ಆಶೀರ್ವಾದ
ಯಾತ್ರೆ ನಂತರ ಯಬ್ಬೋಕ್ ನದಿಯತ್ತ ಸಾಗುತ್ತದೆ—ಯಾಕೋಬನ ಹೋರಾಟ ಮತ್ತು ಪುನರ್ಮಿಲನದ ಸ್ಥಳ. ನಂತರ ಯಾತ್ರಿಕರು ಅಮ್ಮಾನ್ ನಗರದಲ್ಲಿ ಮಹಾಧರ್ಮಗುರು ದಾಲ್ ತೋಸೊ ಅವರನ್ನು ಭೇಟಿ ಮಾಡುತ್ತಾರೆ. “ಜೋರ್ಡನ್ ಅನುಭವವು ಯಾತ್ರಿಕರ ನಂಬಿಕೆಯನ್ನು ಹೊಸದಾಗಿ ಜೀವಂತಗೊಳಿಸುತ್ತದೆ, ಪವಿತ್ರ ಸ್ಥಳಗಳನ್ನು ನೋಡುವುದು ನಂಬಿಕೆಗೆ ಹೊಸ ಬೆಳಕು ನೀಡುತ್ತದೆ.”ಎಂದು ಅವರು ಹೇಳುತ್ತಾರೆ.
ಅವರು ಜೋರ್ಡನ್ನ ಕ್ರೈಸ್ತರ ಉಪಸ್ಥಿತಿಯ ಮಹತ್ವವನ್ನೂ ವಿವರಿಸುತ್ತಾರೆ. “ಪಶ್ಚಿಮದಿಂದ ಬರುವ ಯಾತ್ರಿಕರನ್ನು ನೋಡಿದಾಗ, ಇಲ್ಲಿರುವ ಕ್ರೈಸ್ತರಿಗೆ ತಾವು ವಿಶ್ವ ಧರ್ಮಸಭೆಯ ಭಾಗವೆನ್ನುವ ಭಾವನೆಯನ್ನು ಜೀವಂತಗೊಳಿಸುತ್ತದೆ,” ಎಂದು ಅವರು ಹೇಳುತ್ತಾರೆ.
ಅಮ್ಮಾನ್ನಲ್ಲಿ ವಂ. ಗುರು ಮಾರಿಯೋ ಕೋರ್ನಿಯೋಲಿ ಯಾತ್ರಿಕರನ್ನು ಭೇಟಿಯಾಗುತ್ತಾರೆ. ಅವರು ಐಸಿಸ್ ದಾಳಿಗಳ ವೇಳೆ ನಿನೆವೆ ಪ್ರದೇಶದಿಂದ ಬಂದ ಶರಣಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ದೀಕ್ಷಾಸ್ನಾನ
ಯಾತ್ರೆಯ ಮುಂದಿನ ಹಂತ ಜೋರ್ಡನ್ ನದಿಯ ತೀರ—ಯೇಸುವಿನ ದೀಕ್ಷಾಸ್ನಾನದ ಸ್ಥಳ. “ಇದು ಇತ್ತೀಚಿನ ಮಹತ್ವದ ಪುರಾತತ್ವ ಕಂಡುಹಿಡಿಕೆಯಾಗಿದ್ದು, ಪುರಾತನ ದೇವಾಲಯಗಳು ಮತ್ತು ಪ್ರಾಚೀನ ಯಾತ್ರಿಕರು ಉಲ್ಲೇಖಿಸಿದ ಸ್ಥಳಗಳು ಇಲ್ಲಿ ಪತ್ತೆಯಾಗಿವೆ”ಎಂದು ವಂ. ಗುರು ವೋಲ್ಟಾಜ್ಜಿಯೋ ಹೇಳುತ್ತಾರೆ.
ಸುವಾರ್ತೆಯಲ್ಲಿ ಉಲ್ಲೇಖವಾಗಿರುವ “ಜೋರ್ಡಾನಿನ ಆಚೆಗಿನ ಬೆಥಾನಿಯ” ಇದೇ ಪ್ರದೇಶ ಎಂದು ಅವರು ವಿವರಿಸುತ್ತಾರೆ. ಇದೇ ಸ್ಥಳದಲ್ಲಿ ಯೆಹೋಶುವ ಮತ್ತು ಇಸ್ರಾಯೇಲ್ ಜನರು ನದಿಯನ್ನು ದಾಟಿದರು; ಪ್ರವಾದಿ ಎಲೀಯನು ಸ್ವರ್ಗಕ್ಕೆ ಎತ್ತಲ್ಪಟ್ಟನು.
ಯಾತ್ರಿಕರು 2025ರಲ್ಲಿ ಪ್ರತಿಷ್ಠಾಪಿಸಲ್ಪಟ್ಟ ದೀಕ್ಷಾಸ್ನಾನದ ದೇವಾಲಯವನ್ನು ಭೇಟಿ ಮಾಡುತ್ತಾರೆ. ಅಲ್ಲಿ ವಂ. ಗುರು ಸರ್ಜಿಯೋ ಪೆರೆಜ್ ಈ ಸ್ಥಳದ ಇತಿಹಾಸವನ್ನು ಹಂಚಿಕೊಳ್ಳುತ್ತಾರೆ. ನಂತರ ಯಾತ್ರೆ ಮದಾಬಾ ಮತ್ತು ಮಾಚೆರಸ್ ಕೋಟೆಯತ್ತ ಸಾಗುತ್ತದೆ.ಇಲ್ಲೇ ಸ್ನಾನಿಕ ಯೋವಾನ್ನರ ಶಿರಚ್ಛೇದ ನಡೆದಿದ್ದು.
ಸುವಾರ್ತಾ ಪ್ರಚಾರ
ಕೊನೆಗೆ ಗಡಾರಾ ಮತ್ತು ಗೆರಾಸಾ ನಗರಗಳು—ರೋಮನ್ ಕಾಲದ ಪ್ರಮುಖ ಕೇಂದ್ರಗಳು. “ಈ ದಾರಿಗಳಲ್ಲೇ ಅಪೋಸ್ತಲರು ನಡೆದರು, ಇಂದಿಗೂ ನಾವು ನೋಡಬಹುದಾದ ಈ ರಸ್ತೆಗಳು, ರೋಮ್ನವರೆಗೆ ವಿಸ್ತರಿಸಿದ ಪ್ರಮುಖ ಮಾರ್ಗಗಳು” ಎಂದು ವಂ. ಗುರು ವೋಲ್ಟಾಜ್ಜಿಯೋ ಹೇಳುತ್ತಾರೆ. ಸಂತ ಪೌಲನ ಬಗ್ಗೆ ಯೋಚಿಸಿ. ಪೌಲನು ಮಾತ್ರ ಸಾಮ್ರಾಜ್ಯದ ರಸ್ತೆಗಳಲ್ಲಿ 15,000 ಕಿಲೋಮೀಟರ್ಗಳಿಗಿಂತ ಹೆಚ್ಚು ದೂರ ಕ್ರಮಿಸಿದನೆಂದು ನಾವು ನೆನಪಿಸಿಕೊಳ್ಳಬೇಕು.ಬಲಪ್ರಯೋಗದಿಂದಲ್ಲ ಬದಲಿಗೆ ಶಾಂತಿಮಾರ್ಗದಿಂದ, ಕ್ರಿಸ್ತನ ಶುಭಸಂದೇಶವಾದ 'ಕೆರಿಗ್ಮ್ಯಾ'ವನ್ನು ಸ್ವೀಕರಿಸಿದ ಆದಿ ವಿಶ್ವಾಸಿಗಳಿಂದ ಕ್ರಮೇಣ, ಕ್ರೈಸ್ತ ಧರ್ಮವು ಸಾಮ್ರಾಜ್ಯವನ್ನು ಪ್ರವೇಶಿಸಿ ಒಳಗಿನಿಂದ ಅದನ್ನು ವಶಪಡಿಸಿಕೊಂಡಿತು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).