ಜಾಗತಿಕ ದಕ್ಷಿಣ ಕಥೋಲಿಕ ಮಹಾಧರ್ಮಾಧ್ಯಕ್ಷರಿಂದ “ನ್ಯಾಯಸಮ್ಮತ ಇಂಧನ ಪರಿವರ್ತನೆಗೆ’ ಜಾಗತಿಕ ಒಪ್ಪಂದಕ್ಕೆ ಕರೆ
ಲೇಖಕರು: ಮಾರ್ಕ್ ಸಲುದೆಸ್, LiCAS ವರದಿ
ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಾದ ಕಥೋಲಿಕ ಮಹಾಧರ್ಮಾಧ್ಯಕ್ಷರು ಪಳೆಯುಳಿಕೆ ಇಂಧನಗಳ ವಿಸ್ತರಣೆಯನ್ನು ನಿಲ್ಲಿಸಿ ಪುನರುತ್ಪಾದಕ ಇಂಧನದತ್ತ ನ್ಯಾಯಸಮ್ಮತ ಪರಿವರ್ತನೆ ನಡೆಸಲು ಜಾಗತಿಕ ಒಪ್ಪಂದವನ್ನು ಅಂಗೀಕರಿಸುವಂತೆ ಸರ್ಕಾರಗಳನ್ನು ಕೋರಿದ್ದಾರೆ.
ಈ ಮನವಿ “ನಮ್ಮೆಲ್ಲರ ಮನೆಗಾಗಿ ಜಾಗತಿಕ ದಕ್ಷಿಣ ಧರ್ಮಸಭೆಗಳ ಘೋಷಣಾಪತ್ರ” ಎಂಬ ಹೆಸರಿನ ದಸ್ತಾವೇಜಿನಲ್ಲಿ ವ್ಯಕ್ತವಾಗಿದೆ. ಜಾಗತಿಕ ದಕ್ಷಿಣದ ದೇಶಗಳಲ್ಲಿನ ಕಥೋಲಿಕ ಧರ್ಮಸಭೆಯನ್ನು ಪ್ರತಿನಿಧಿಸುವ ಖಂಡ ಮಟ್ಟದ ಮಹಾಧರ್ಮಾಧ್ಯಕ್ಷರ ಸಂಸ್ಥೆಗಳು ಈ ಘೋಷಣಾಪತ್ರವನ್ನು ಪ್ರಕಟಿಸಿದ್ದು, ಯುರೋಪ್ ಮತ್ತು ಓಶಿಯಾನಿಯಾದ ಧರ್ಮಸಭಾ ನಾಯಕರೂ ಇದಕ್ಕೆ ಬೆಂಬಲ ನೀಡಿದ್ದಾರೆ.
LiCAS Newsಗೆ ಕಳುಹಿಸಲಾದ ಈ ದಸ್ತಾವೇಜಿನಲ್ಲಿ, ಆಫ್ರಿಕಾ, ಲ್ಯಾಟಿನ್ ಅಮೆರಿಕಾ ಮತ್ತು ಏಷ್ಯಾದ ಅನೇಕ ಸಮುದಾಯಗಳು ಈಗಾಗಲೇ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಮತ್ತು ಅಸ್ಥಿರ ಆರ್ಥಿಕ ವ್ಯವಸ್ಥೆಗಳ ಪರಿಣಾಮಗಳನ್ನು ಅನುಭವಿಸುತ್ತಿವೆ ಎಂದು ಮಹಾಧರ್ಮಾಧ್ಯಕ್ಷರು ಹೇಳಿದ್ದಾರೆ.
ಘೋಷಣಾಪತ್ರದಲ್ಲಿ ಹವಾಮಾನ ಬದಲಾವಣೆ “ಪರಿಸರ ಸಂಬಂಧಿತ ಸಂಕಟ ಮಾತ್ರವಲ್ಲ”, ಅದು “ಅಸ್ಥಿರ ಉತ್ಪಾದನೆ ಮತ್ತು ಬಳಕೆಯ ಮಾದರಿಗಳ ಪರಿಣಾಮವೂ ಆಗಿದೆ ಹಾಗೂ ‘ಮಾನವನನ್ನು ಕೊಲ್ಲುವ ಆರ್ಥಿಕ ವ್ಯವಸ್ಥೆಯ’ ಫಲವೂ ಆಗಿದೆ” ಎಂದು ಹೇಳಲಾಗಿದೆ. ಈ ಪರಿಸ್ಥಿತಿ ಮಾನವ ಗೌರವ ಮತ್ತು ಶಾಂತಿಗೆ ಧಕ್ಕೆ ತರುವ ವಿಶಾಲ ಸಂಕಟವನ್ನು ಉಂಟುಮಾಡುತ್ತಿದೆ ಎಂದು ದಸ್ತಾವೇಜು ಎಚ್ಚರಿಸುತ್ತದೆ.
ಜಾಗತಿಕ ತಾಪಮಾನ ಏರಿಕೆಗೆ ಪಳೆಯುಳಿಕೆ ಇಂಧನಗಳ ನಿರಂತರ ಬಳಕೆಯೇ ಕಾರಣವೆಂದು ವೈಜ್ಞಾನಿಕ ಸಾಕ್ಷ್ಯಗಳನ್ನು ಮಹಾಧರ್ಮಾಧ್ಯಕ್ಷರು ಉಲ್ಲೇಖಿಸಿದ್ದಾರೆ. ಕಲ್ಲಿದ್ದಲು, ತೈಲ ಮತ್ತು ಅನಿಲವನ್ನು ಸುಡುವುದು “ಈ ಬಾಗಿಲಲ್ಲಿರುವ ಅಪಾಯದ ಪ್ರಮುಖ ಕಾರಣ” ಎಂದು ದಸ್ತಾವೇಜು ಹೇಳುತ್ತದೆ.
ಕಥೋಲಿಕ ಸಾಮಾಜಿಕ ಬೋಧನೆಗಳನ್ನು ಆಧಾರವಾಗಿಟ್ಟುಕೊಂಡು, ಪಳೆಯುಳಿಕೆ ಇಂಧನಗಳನ್ನು ಹಂತ ಹಂತವಾಗಿ ಕಡಿಮೆ ಮಾಡುವ ಮತ್ತು ಅಸುರಕ್ಷಿತ ಸಮುದಾಯಗಳನ್ನು ರಕ್ಷಿಸುವ ಬದ್ಧ ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ರೂಪಿಸಲು ಮಹಾಧರ್ಮಾಧ್ಯಕ್ಷರು ಸರ್ಕಾರಗಳನ್ನು ಕೋರಿದ್ದಾರೆ.
“ಬಡವರಿಗಾಗಿ ವಿಶೇಷ ಆದ್ಯತೆ ಮತ್ತು ಸೃಷ್ಟಿಯ ಆರೈಕೆಯ ಕುರಿತು ಕಥೋಲಿಕ ಸಾಮಾಜಿಕ ಬೋಧನೆಗಳಿಂದ ಮಾರ್ಗದರ್ಶನ ಪಡೆದ ನಾವು, ನ್ಯಾಯಸಮ್ಮತ ಇಂಧನ ಪರಿವರ್ತನೆಗೆ ನಮ್ಮ ದೃಢ ಬೆಂಬಲವನ್ನು ವ್ಯಕ್ತಪಡಿಸುತ್ತೇವೆ,” ಎಂದು ಮಹಾಧರ್ಮಾಧ್ಯಕ್ಷರು ಹೇಳಿದ್ದಾರೆ. ಪಳೆಯುಳಿಕೆ ಇಂಧನಗಳ ವಿಸ್ತರಣೆಯನ್ನು ನಿಲ್ಲಿಸಿ ಅವುಗಳನ್ನು ತ್ಯಜಿಸಲು ಜಾಗತಿಕ ಒಪ್ಪಂದವನ್ನು ಅಂಗೀಕರಿಸುವುದು ನೈತಿಕ ಹಾಗೂ ರಾಜಕೀಯ ಅಗತ್ಯವೆಂದು ಅವರು ಸರ್ಕಾರಗಳಿಗೆ ಕರೆ ನೀಡಿದ್ದಾರೆ.
ಈ ಘೋಷಣಾಪತ್ರದಲ್ಲಿ ಪಳೆಯುಳಿಕೆ ಇಂಧನ ಒಪ್ಪಂದ (Fossil Fuel Treaty) ಎಂಬ ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಅದು ಪ್ಯಾರಿಸ್ ಒಪ್ಪಂದವನ್ನು ಪೂರಕವಾಗಿ ಬಲಪಡಿಸಲಿದೆ ಎಂದು ಹೇಳಲಾಗಿದೆ. ಹೊಸ ಕಲ್ಲಿದ್ದಲು, ತೈಲ ಮತ್ತು ಅನಿಲ ಅನ್ವೇಷಣೆ ಹಾಗೂ ಉತ್ಪಾದನೆಯನ್ನು ನಿಲ್ಲಿಸುವುದು, ಈಗಿರುವ ಪಳೆಯುಳಿಕೆ ಇಂಧನ ಯೋಜನೆಗಳನ್ನು ನ್ಯಾಯಯುತವಾಗಿ ಹಂತ ಹಂತವಾಗಿ ಮುಚ್ಚುವುದು, ಮತ್ತು ಕಾರ್ಮಿಕರು ಹಾಗೂ ಸಮುದಾಯಗಳನ್ನು ರಕ್ಷಿಸುವ ಜಾಗತಿಕ “ನ್ಯಾಯಸಮ್ಮತ ಪರಿವರ್ತನೆ”ಯನ್ನು ಖಚಿತಪಡಿಸುವುದು ಈ ಪ್ರಸ್ತಾವನೆಯ ಮುಖ್ಯ ಅಂಶಗಳಾಗಿವೆ.
ಪಳೆಯುಳಿಕೆ ಇಂಧನಗಳ ವಿಸ್ತರಣೆ ಮುಂದುವರಿದರೆ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳು ಹೆಚ್ಚಾಗುವ ಅಪಾಯವಿದೆ ಎಂದು ಧರ್ಮಸಭಾ ನಾಯಕರು ಎಚ್ಚರಿಸಿದ್ದಾರೆ. ತೈಲ ಮತ್ತು ಅನಿಲ ವಿಸ್ತರಣೆಯನ್ನು ಉತ್ತೇಜಿಸುವ ನೀತಿಗಳು ಕೆಲವು ಸಂದರ್ಭಗಳಲ್ಲಿ ಸಂಘರ್ಷಗಳಿಗೆ ಕಾರಣವಾಗಿದ್ದು, “ಪೆಟ್ರೋ-ಸಾಮ್ರಾಜ್ಯವಾದದ ರೂಪಗಳು” ಬೆಳೆಯಲು ಕಾರಣವಾಗಿವೆ ಎಂದು ದಸ್ತಾವೇಜು ಹೇಳುತ್ತದೆ.
ಫಿಲಿಪ್ಪೀನ್ಸ್ನ ಕಥೋಲಿಕ ಧರ್ಮಸಭೆಯೂ ಪಳೆಯುಳಿಕೆ ಇಂಧನಗಳು ಮತ್ತು ಸಂಘರ್ಷಗಳ ನಡುವಿನ ಸಂಬಂಧದ ಬಗ್ಗೆ ಇದೇ ರೀತಿಯ ಚಿಂತೆಗಳನ್ನು ವ್ಯಕ್ತಪಡಿಸಿದೆ. ಮಾರ್ಚ್ 4ರಂದು ಪ್ರಕಟಿಸಿದ ಧರ್ಮಪಾಲನಾ ಪ್ರಕಟಣೆಯಲ್ಲಿ ಕಾರಿತಾಸ್ ಫಿಲಿಪ್ಪೀನ್ಸ್, ಮಧ್ಯಪ್ರಾಚ್ಯದಲ್ಲಿ ಉಲ್ಬಣವಾಗುತ್ತಿರುವ ಸಂಕಟ ಜಾಗತಿಕ ಇಂಧನ ವ್ಯವಸ್ಥೆಯ ಆಳವಾದ ಸಮಸ್ಯೆಗಳನ್ನು ಬಹಿರಂಗಪಡಿಸುತ್ತಿದೆ ಎಂದು ಹೇಳಿದೆ.
ಧರ್ಮಸಭೆಯ ಸಾಮಾಜಿಕ ಸೇವಾ ವಿಭಾಗವು, “ಪಳೆಯುಳಿಕೆ ಇಂಧನ ಆರ್ಥಿಕತೆ ಭೌಗೋಳಿಕ-ರಾಜಕೀಯ ಸಂಘರ್ಷಗಳನ್ನು ಇನ್ನೂ ರೂಪಿಸುತ್ತಿದೆ” ಎಂದು ಹೇಳಿದೆ. ಹೋರ್ಮುಜ್ ಜಲಸಂಧಿಯಂತಹ ಪ್ರಮುಖ ಇಂಧನ ಮಾರ್ಗಗಳು ಸೇನಾ ಶಕ್ತಿ, ಆರ್ಥಿಕ ಹಿತಾಸಕ್ತಿ ಮತ್ತು ತೈಲ ಅವಲಂಬನೆಯ ನಡುವೆ ಘರ್ಷಣೆಯ ಕೇಂದ್ರಗಳಾಗಿ ಪರಿಣಮಿಸಿವೆ ಎಂದು ಅದು ಸೂಚಿಸಿದೆ.
“ಯುದ್ದ-ತೈಲ ಸಂಘರ್ಷದಲ್ಲಿ ಸಿಲುಕಿಕೊಂಡಾಗ ಅದರ ಪರಿಣಾಮಗಳು ವಿಶ್ವದಾದ್ಯಂತ ಪ್ರತಿಧ್ವನಿಸುತ್ತವೆ. ವಿಶೇಷವಾಗಿ ಫಿಲಿಪ್ಪೀನ್ಸ್ನಂತಹ ಅಸುರಕ್ಷಿತ ಆರ್ಥಿಕ ವ್ಯವಸ್ಥೆಗಳ ತೀವ್ರ ಪರಿಣಾಮ ಬೀರುತ್ತದೆ,” ಎಂದು ಕಾರಿತಾಸ್ ಫಿಲಿಪ್ಪೀನ್ಸ್ ಎಚ್ಚರಿಸಿದೆ. ದೇಶ ಇನ್ನೂ ಆಮದು ಮಾಡಿಕೊಳ್ಳುವ ಕಲ್ಲಿದ್ದಲು, ತೈಲ ಮತ್ತು ಅನಿಲಗಳ ಮೇಲೆ ಅಪಾಯಕರ ರೀತಿಯಲ್ಲಿ ಅವಲಂಬಿತವಾಗಿದೆ. ಈ ಅವಲಂಬನೆ ರಾಷ್ಟ್ರದ ಸ್ಥಿರತೆಯನ್ನು ತನ್ನ ನಿಯಂತ್ರಣದ ಹೊರಗಿನ ಸಂಘರ್ಷಗಳಿಗೆ ಕೊಂಡಿಹಾಕುತ್ತದೆ ಮತ್ತು ಜಾಗತಿಕ ಇಂಧನ ಮಾರುಕಟ್ಟೆಯ ಅಸ್ಥಿರತೆಯ ಪರಿಣಾಮಗಳಿಗೆ ಜನರನ್ನು ಒಳಪಡಿಸುತ್ತದೆ ಎಂದು ಅದು ಹೇಳಿದೆ.
ಮುಂದಿನ ಅಂತರರಾಷ್ಟ್ರೀಯ ಹವಾಮಾನ ಮಾತುಕತೆಗಳನ್ನು ಗಮನದಲ್ಲಿಟ್ಟುಕೊಂಡು, ಪಳೆಯುಳಿಕೆ ಇಂಧನಗಳನ್ನು ಹಂತ ಹಂತವಾಗಿ ಕಡಿಮೆ ಮಾಡುವ ಯೋಜನೆಗಳನ್ನು ರಾಷ್ಟ್ರೀಯ ಹವಾಮಾನ ಬದ್ಧತೆಗಳ ಭಾಗವನ್ನಾಗಿಸಲು ಮತ್ತು ಸುಸಂಘಟಿತ ಇಂಧನ ಪರಿವರ್ತನೆಗಾಗಿ ಜಾಗತಿಕ ಸಹಕಾರವನ್ನು ಬಲಪಡಿಸಲು ಮಹಾಧರ್ಮಾಧ್ಯಕ್ಷರು ಸರ್ಕಾರಗಳನ್ನು ಕೋರಿದ್ದಾರೆ.
ಘೋಷಣಾಪತ್ರದ ಅಂತ್ಯದಲ್ಲಿ ಜಾಗತಿಕ ಐಕ್ಯತೆ ಮತ್ತು ಸಮೂಹ ಕಾರ್ಯಕ್ಕೆ ಕರೆ ನೀಡಲಾಗಿದೆ. “ಭೂಮಿಯ ಅಳಲನ್ನೂ ಬಡವರ ಅಳಲನ್ನೂ ಕೇಳಲು ನಾವು ಸಿದ್ಧರಾಗಿದ್ದೇವೆ,” ಎಂದು ಮಹಾಧರ್ಮಾಧ್ಯಕ್ಷರು ಹೇಳುತ್ತಾ, “ನಮ್ಮೆಲ್ಲರ ಮನೆಯಾದ ಭೂಮಿಯನ್ನು ರಕ್ಷಿಸಲು ಉತ್ತರ ಮತ್ತು ದಕ್ಷಿಣದ ನಡುವಿನ ಐತಿಹಾಸಿಕ ಮೈತ್ರಿಗೆ ಸತ್ಸಂಕಲ್ಪದ ಎಲ್ಲ ಜನರನ್ನು ಆಹ್ವಾನಿಸುತ್ತೇವೆ” ಎಂದು ಮನವಿ ಮಾಡಿದ್ದಾರೆ.
ಈ ಲೇಖನವನ್ನು ಮೂಲತಃ https://www.licas.news ನಲ್ಲಿ ಪ್ರಕಟಿಸಲಾಗಿದೆ. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಮೂರನೇ ವ್ಯಕ್ತಿಗಳಿಂದ ಅನಧಿಕೃತ ಮರುಪ್ರಕಟಣೆಗೆ ಅವಕಾಶವಿಲ್ಲ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).