ಹುಡುಕಿ

2026.02.25 Participants of the EDSAmination of Conscience gathering held in Rome 2026.02.25 Participants of the EDSAmination of Conscience gathering held in Rome 

ರೋಮ್‌ನಲ್ಲಿ ಫಿಲಿಪ್ಪೀನ್ಸ್ ಜನಶಕ್ತಿಯ ಸ್ಮರಣಾ ಕ್ಷಣ

ರೋಮ್‌ನಲ್ಲಿ ವಾಸಿಸುವ ಫಿಲಿಪ್ಪೀನ್ ಮೂಲದ ಧರ್ಮಗುರುಗಳು, ಧಾರ್ಮಿಕ ಜೀವನಕ್ಕೆ ಅರ್ಪಿತರಾದವರು ಹಾಗೂ ಸಾಮಾನ್ಯ ಭಕ್ತರು ಒಟ್ಟಾಗಿ ಸೇರಿ, EDSA People Power(ಜನಶಕ್ತಿ) ಚಳವಳಿಯ 40ನೇ ವರ್ಷದ ಸ್ಮರಣೆಯನ್ನು ಆಚರಿಸಿದರು. ಈ ಸಂದರ್ಭವನ್ನು ಅವರು ಧೈರ್ಯ, ಐಕ್ಯತೆ ಮತ್ತು ನೈತಿಕ ಸ್ಪಷ್ಟತೆಯ ಮಹತ್ವದ ಕ್ಷಣವಾಗಿ ಸ್ಮರಿಸಿದರು.

ಲೇಖಕರು: ವಂ. ಗುರು ಮಾರ್ಕ್ ರಾಬಿನ್ ದೆಸ್ತುರಾ, RCJ

ಫೆಬ್ರವರಿ 25ರಂದು ವಿಶ್ವದಾದ್ಯಂತ ಫಿಲಿಪ್ಪೀನ್ಸ್ ಮೂಲದ ಜನರು EDSA People Power ಕ್ರಾಂತಿಯ 40ನೇ ವರ್ಷದ ಸ್ಮರಣೆಯನ್ನು ಆಚರಿಸಿದರು. 1986ರಲ್ಲಿ ನಡೆದ ಈ ಶಾಂತಿಯುತ ಜನ ಆಂದೋಲನವು ಎರಡು ದಶಕಗಳ ಏಕಚಕ್ರಾಧಿಕಾರಕ್ಕೆ ಅಂತ್ಯ ತಂದ ಮಹತ್ವದ ಘಟನೆಯಾಗಿ ಇತಿಹಾಸದಲ್ಲಿ ಉಳಿದಿದೆ.

ಅಸ್ತ್ರಶಸ್ತ್ರಗಳಿಲ್ಲದ ಈ ಪ್ರತಿರೋಧ ಚಳವಳಿಗೆ ಅಗಲಿದ ಪ್ರಧಾನ ಗುರು ಜೈಮಿ ಸಿನ್ ಅವರ ಕರೆಯು ಪ್ರೇರಣೆಯಾಯಿತು. ಅದರ ಪರಿಣಾಮವಾಗಿ ಸಾವಿರಾರು ಜನರು ಮನಿಲಾದ ಎಪಿಫಾನಿಯೋ ಡಿ ಲೊಸ್ ಸಂತೋಸ್ ಅವೆನ್ಯೂ (EDSA) ಕಡೆ ಸೇರಿ, ಟ್ಯಾಂಕ್‌ಗಳು ಮತ್ತು ಸೈನಿಕರ ಎದುರು ಧೈರ್ಯದಿಂದ ನಿಂತರು. ಧರ್ಮಗುರುಗಳು, ಧಾರ್ಮಿಕ ಜೀವನಕ್ಕೆ ಅರ್ಪಿತರಾದವರು ಹಾಗೂ ಸಾಮಾನ್ಯ ಭಕ್ತರು ಜನಸಾಮಾನ್ಯರೊಂದಿಗೆ ಕೈಜೋಡಿಸಿ, ನಂಬಿಕೆ, ಅಂತಃಕರಣ ಮತ್ತು ಅಹಿಂಸೆಯ ಶಕ್ತಿಗೆ ಸಾಕ್ಷಿಯಾದರು.

ಈ ಘಟನೆ ಫಿಲಿಪ್ಪೀನ್ಸ್ ಇತಿಹಾಸದಲ್ಲಿ ದಿಕ್ಕು ತೋರಿದ ಕ್ಷಣವಾಗಿ ಉಳಿದಿದ್ದು, ಸಂಕಷ್ಟದ ಸಮಯದಲ್ಲಿ ಧರ್ಮಸಭೆಯ ನೈತಿಕ ನಾಯಕತ್ವ ಮತ್ತು ಜನರ ಐಕ್ಯತೆಯ ಬಲವನ್ನು ವಿಶ್ವದ ಮುಂದೆ ಪ್ರಬಲವಾಗಿ ತೋರಿಸಿದ ಉದಾಹರಣೆಯಾಗಿದೆ.

ರೋಮಿನಲ್ಲಿ EDSA ಜನಶಕ್ತಿ ಸ್ಮರಣೆ

ಈ ವರ್ಷ ರೋಮಿನಲ್ಲಿ ವಾಸಿಸುವ ಫಿಲಿಪ್ಪೀನ್ ಮೂಲದ ಧರ್ಮಗುರುಗಳು, ಧಾರ್ಮಿಕ ಜೀವನಕ್ಕೆ ಅರ್ಪಿತರಾದವರು, ವಿದ್ಯಾರ್ಥಿಗಳು ಹಾಗೂ ವಿದೇಶದಲ್ಲಿ ಕೆಲಸ ಮಾಡುತ್ತಿರುವ ಭಕ್ತರು ಒಟ್ಟುಗೂಡಿ EDSA(Epifanio de los Santos Avenue) ಜನಶಕ್ತಿ ಚಳವಳಿಯ ಸ್ಮರಣೆಯನ್ನು ಆಚರಿಸಿದರು. ಈ ಸಮಾಗಮವು ಸ್ಮರಣೆ ಮಾತ್ರವಲ್ಲದೆ ಚಿಂತನೆ ಮತ್ತು ಸಂವಾದದ ಕ್ಷಣವಾಗಿಯೂ ರೂಪುಗೊಂಡಿತು.

ಫೆಬ್ರವರಿ 24ರಂದು ಅವರು ಕಾಲೆಜಿಯೋ ಡೆಲ್ ವರ್ಬೊ ಡಿವಿನೊನಲ್ಲಿ ಸೇರಿ “ಆತ್ಮಸಾಕ್ಷಿಯ EDSAmination: ಐತಿಹಾಸಿಕ ಪ್ರಾಮಾಣಿಕತೆ ಮತ್ತು ನೈತಿಕ ಸ್ಪಷ್ಟತೆಯ ಬಗ್ಗೆ ಕೋಮು ಪ್ರತಿಬಿಂಬ” (EDSAmination of Conscience: Communal Reflection about Historical Honesty and Moral Clarity) ಎಂಬ ಕಾರ್ಯಕ್ರಮವನ್ನು ನಡೆಸಿದರು.

ಈ ಕಾರ್ಯಕ್ರಮವನ್ನು ಸಹೋದರ. ಆರ್ಮಿನ್ ಲುಯಿಸ್ಟ್ರೋ (FSC), ವಂ. ಗುರು ಜೆರೋಮ್ ಮಾರ್ಕ್ವೆಜ್ (SVD) ಹಾಗೂ ವಂ. ಗುರು ಆಲ್ಬರ್ಟ್ ಅಲೆಹೊ (SJ) ಮುನ್ನಡೆಸಿದರು. ಭಾಗವಹಿಸಿದವರು ಇಂದಿನ ಸಾಮಾಜಿಕ ಮತ್ತು ರಾಜಕೀಯ ಹಿನ್ನೆಲೆಯಲ್ಲಿಯೂ EDSA ಚಳವಳಿಯ ಅರ್ಥವೇನು ಎಂಬುದನ್ನು ಚಿಂತಿಸಿ, ತಮ್ಮ ವೈಯಕ್ತಿಕ ನೆನಪುಗಳು ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು.

ಈ ಸಮಾಗಮವು ಇತಿಹಾಸವನ್ನು ನೆನೆದು, ನೈತಿಕ ಸ್ಪಷ್ಟತೆ ಮತ್ತು ಜಾಗೃತ ಅಂತಃಕರಣದೊಂದಿಗೆ ಸಮಾಜವನ್ನು ನೋಡುವ ಅಗತ್ಯವನ್ನು ಮತ್ತೊಮ್ಮೆ ಒತ್ತಿ ಹೇಳಿದ ಆತ್ಮಪರಿಶೀಲನೆಯ ಕ್ಷಣವಾಯಿತು.

ಐಕ್ಯತೆ ಮತ್ತು ಅಂತಃಕರಣದ ಕರೆಯೋಲೆ

ತಮ್ಮ ಭಾಷಣದ ಆರಂಭದಲ್ಲಿ ವಂ. ಗುರು ಜೆರೋಮ್ ಮಾರ್ಕ್ವೆಜ್, ಜನಶಕ್ತಿ ಚಳವಳಿಯ ಶಾಶ್ವತ ಪ್ರಸ್ತುತತೆಯನ್ನು ನೆನಪಿಸಿದರು. ರೋಮಿನಲ್ಲಿ ಇದ್ದರೂ ತಮ್ಮ ಹೃದಯಗಳು ಫಿಲಿಪ್ಪೀನ್ಸ್ ದೇಶದೊಂದಿಗೆ ಹತ್ತಿರವಾಗಿವೆ ಎಂದು ಅವರು ಭಾವನಾತ್ಮಕವಾಗಿ ಹೇಳಿದರು.

ಅವರು ತಿಳಿಸಿದಂತೆ, EDSA ಕೇವಲ ಇತಿಹಾಸದ ಒಂದು ಅಧ್ಯಾಯವಲ್ಲ; ಅದು ಫಿಲಿಪ್ಪೀನೋ ಜನರ ಒಟ್ಟುಗೂಡಿದ ಅಂತಃಕರಣದ ನೆನಪು. ಈ ಸ್ಮರಣೆ ಭೂತಕಾಲವನ್ನು ಕೇವಲ ರೋಮಾಂಚನೀಯ ದೃಷ್ಟಿಯಿಂದ ನೋಡುವುದಲ್ಲ; ಬದಲಾಗಿ, ಒಟ್ಟಾಗಿ ಪ್ರಯಾಣಿಸಿ, ಕೇಳಿ, ಪರಿಶೀಲಿಸಿ, ತಮ್ಮ ಆತ್ಮವನ್ನು ಸಮುದಾಯವಾಗಿ ಎದುರಿಸುವ ಕ್ಷಣವಾಗಿದೆ.

ಇಂದಿನ ವಿಭಜನೆಗಳನ್ನು ಉಲ್ಲೇಖಿಸಿದ ಅವರು, ನಾಲ್ವತ್ತು ವರ್ಷಗಳ ನಂತರವೂ ನ್ಯಾಯ, ಮಾನವ ಹಕ್ಕುಗಳು ಮತ್ತು ಜವಾಬ್ದಾರಿತನದ ಕುರಿತು ದೇಶದಲ್ಲಿ ಭಿನ್ನಾಭಿಪ್ರಾಯಗಳು ಉಳಿದಿವೆ ಎಂದು ಹೇಳಿದರು. ಆದ್ದರಿಂದ ಈ ಸಮಾಗಮವನ್ನು ಧೈರ್ಯ, ನ್ಯಾಯ, ಸತ್ಯ ಮತ್ತು ದೇಶದ ಮೇಲಿನ ಪ್ರೀತಿಯನ್ನು ಪುನರುಜ್ಜೀವನಗೊಳಿಸುವ ಸ್ಥಳವಾಗಿ ನೋಡುವಂತೆ ಅವರು ಎಲ್ಲರನ್ನು ಆಹ್ವಾನಿಸಿದರು.

ಧೈರ್ಯದ ವೈಯಕ್ತಿಕ ಸಾಕ್ಷ್ಯಗಳು

ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಲವರು 1986ರ ಜನಶಕ್ತಿ ಕ್ರಾಂತಿಯ ತಮ್ಮ ನೇರ ಅನುಭವಗಳನ್ನು ಹಂಚಿಕೊಂಡರು. ಅವುಗಳಲ್ಲಿ ಧೈರ್ಯ, ಭಯ, ನಂಬಿಕೆ ಮತ್ತು ಐಕ್ಯತೆಯ ಭಾವನೆಗಳು ಸ್ಪಷ್ಟವಾಗಿ ಕೇಳಿಬಂದವು.

ಒಬ್ಬ ಧಾರ್ಮಿಕ ಸಹೋದರಿ, ಪ್ರಧಾನಗುರು ಸಿನ್ ನೀಡಿದ ಕರೆಗೆ ತಮ್ಮ ಕುಟುಂಬ ಹೇಗೆ ಸ್ಪಂದಿಸಿತು ಎಂಬುದನ್ನು ನೆನಪಿಸಿಕೊಂಡರು. ತಮ್ಮ ತಂದೆಯ ಮಾತುಗಳಿಂದ ಧೈರ್ಯ ದೊರಕಿತು. ಜನರು ಹೋಗುವಂತೆ ಪ್ರಧಾನ ಗುರುಗಳು ಕರೆದಿರುವುದರಿಂದ ನೀವು ಹೋಗಿ ಎಂಬ ಉತ್ತೇಜನವೇ ಅವರನ್ನು EDSA ಕಡೆಗೆ ಕರೆದೊಯ್ದಿತು. ಹೆಲಿಕಾಪ್ಟರ್‌ಗಳು ತಲೆಯ ಮೇಲೆ ತಿರುಗಾಡುತ್ತಿದ್ದವು, ದಾಳಿ ಸಂಭವಿಸಬಹುದು ಎಂಬ ಭಯವಿದ್ದರೂ ಅಲ್ಲಿಂದ ಹಿಂತಿರುಗದೆ ನಿಲ್ಲುವ ನಿರ್ಧಾರವನ್ನು ಅವರು ತೆಗೆದುಕೊಂಡರು.

ಆ ಸಮಯದಲ್ಲಿ ವಿದ್ಯಾರ್ಥಿಯಾಗಿದ್ದ ಮತ್ತೊಬ್ಬ ವಂ. ಗುರು, ಟ್ಯಾಂಕ್ ಹಿಂದೆ ನಿಂತು ಜಪಮಾಲೆ ಪ್ರಾರ್ಥನೆ ಮಾಡುತ್ತಿದ್ದ ಕ್ಷಣಗಳನ್ನು ಹಂಚಿಕೊಂಡರು. ಜೂನ್ ಕೀತ್ಲಿ ದಿನರಾತ್ರಿ ನಡೆಯುತ್ತಿದ್ದ ಘಟನೆಗಳನ್ನು ಪ್ರಕಟಿಸುತ್ತಿದ್ದಾಗ, ಅವಳನ್ನು ರಕ್ಷಿಸಲು ಜನರು ಪ್ರಾರ್ಥನೆಯೊಂದಿಗೇ ನಿಂತಿದ್ದರು ಎಂದು ಅವರು ಹೇಳಿದರು. ಅವರ ಮಾತಿನಲ್ಲಿ, ಫಿಲಿಪ್ಪೀನೋ ಜನರು ಏಕಮನಸ್ಕರಾಗಿ ಒಂದಾಗಿ ನಿಂತದ್ದು ಸರ್ವಾಧಿಕಾರವನ್ನು ಕೊನೆಗೊಳಿಸುವ ಶಕ್ತಿಯಾಯಿತು.

ಮಿಂದನಾವೊ ಪ್ರದೇಶದಿಂದ ಬಂದ ಮತ್ತೊಬ್ಬ ವಂ. ಗುರು, ಶಾಂತಿಯುತ ಮೆರವಣಿಗೆಗಳನ್ನು ಆಯೋಜಿಸಿ ಶಸ್ತ್ರಸಜ್ಜಿತ ಸೈನಿಕರನ್ನು ಎದುರಿಸಿದ ಅನುಭವವನ್ನು ವಿವರಿಸಿದರು. ಯಾರೂ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಬಾರದು ಎಂಬ ಸ್ಪಷ್ಟ ನಿರ್ಧಾರದಿಂದ, ಜನರು ಸೈನ್ಯದ ಎದುರು ನಿಂತು ‘ನನ್ನ ದೇಶ’ ಎಂಬ ಗೀತೆಯನ್ನು ಹಾಡಿದ ಕ್ಷಣಗಳನ್ನು ಅವರು ನೆನಪಿಸಿದರು.

ಈ ಎಲ್ಲ ಅನುಭವಗಳನ್ನು ಒಗ್ಗೂಡಿಸಿ ನೋಡಿದಾಗ, ಆ ಸಮಯದಲ್ಲಿ ಧರ್ಮಸಭೆ ಜನರ ಮುಂಚೂಣಿಯಲ್ಲಿ ನಿಂತಿತ್ತು ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದರು. ನ್ಯಾಯ ಯಾವತ್ತಿದೆ ಎಂಬ ನೈತಿಕ ಸ್ಪಷ್ಟತೆ ಜನರಿಗೆ ದೊರಕಿತ್ತು, ಮತ್ತು ಅದೇ ಅವರಿಗೆ ತಮ್ಮ ಸ್ಥಾನವನ್ನು ದೃಢವಾಗಿ ಆಯ್ಕೆಮಾಡಲು ಸಹಾಯ ಮಾಡಿತು.

ಪರಿಶೀಲನಾ ಗುಂಪುಗಳ ಧ್ವನಿಗಳು

ಗುಂಪು ಚರ್ಚೆಗಳ ಸಂದರ್ಭದಲ್ಲಿ ಭಾಗವಹಿಸಿದವರು EDSA ಜನಶಕ್ತಿ ಪರಂಪರೆಯ ಬಗ್ಗೆ ಕೃತಜ್ಞತೆಯ ಜೊತೆಗೆ ಚಿಂತೆಯನ್ನೂ ವ್ಯಕ್ತಪಡಿಸಿದರು. ಒಂದು ಗುಂಪಿನ ಅಭಿಪ್ರಾಯದಲ್ಲಿ, EDSA ಅನುಭವದಲ್ಲಿ ಸ್ಪಷ್ಟವಾಗಿ ಕಂಡದ್ದು ಸಂತೋಷ ಮತ್ತು ಪರಸ್ಪರ ಸಹಕಾರದ ಮನೋಭಾವ. ಅಪರಿಚಿತರಾದರೂ ಸಹ ಒಬ್ಬರಿಗೊಬ್ಬರು ನೆರವಾಗುವ ಸಹಜತೆಯೇ ಆ ಚಳವಳಿಯ ಆತ್ಮವಾಗಿತ್ತು ಎಂದು ಅವರು ಹಂಚಿಕೊಂಡರು. ಆದರೆ ಇಂದಿನ ಕಾಲದಲ್ಲಿ ಇತಿಹಾಸದ ವಿಕೃತಿ ಮತ್ತು ಮರುಲೇಖನದ ಹಿನ್ನೆಲೆಯಲ್ಲಿಯೇ ಧರ್ಮಸಭೆ ತನ್ನ ಪ್ರವಾದನಾ ಪಾತ್ರವನ್ನು ಹೇಗೆ ನಿರ್ವಹಿಸಬೇಕು ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟರು.

ಮತ್ತೊಬ್ಬರು, EDSA ನಮ್ಮ ಜೀವನವನ್ನು ಬದಲಿಸಿತು ಮಾತ್ರವಲ್ಲ, ಫಿಲಿಪ್ಪೀನೋ ಜನರಾಗಿ ಮತ್ತು ಕಥೋಲಿಕ ವಿಶ್ವಾಸಿಗಳಾಗಿ ನಮ್ಮ ಗುರುತನ್ನೇ ನಿರಂತರವಾಗಿ ರೂಪಿಸುತ್ತಿದೆ ಎಂದು ಹೇಳಿದರು. ಇನ್ನೂ ಕೆಲವು ಸವಾಲುಗಳು ಉಳಿದಿವೆ ಎಂಬುದನ್ನೂ ಅವರು ಒಪ್ಪಿಕೊಂಡರು. ವಿಶೇಷವಾಗಿ EDSAಯ ನಿಜವಾದ ಅರ್ಥದ ಬಗ್ಗೆ ಶಿಕ್ಷಣದ ಕೊರತೆ ಇನ್ನೂ ಕಾಣಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಇತರರು ಅಹಿಂಸೆಯ ಮತ್ತು ಐಕ್ಯತೆಯ ಮಹತ್ವವನ್ನು ತಿಳಿಸುತ್ತಾ, “ಹಿಂಸೆಯಿಲ್ಲದೆ ಸಹ ಬದಲಾವಣೆ ಸಾಧ್ಯವೆಂಬ ನಂಬಿಕೆ ಜನಶಕ್ತಿ ಚಳವಳಿಯ ಮುಖ್ಯ ಸಂದೇಶವಾಗಿತ್ತು” ಎಂದು ಹೇಳಿದರು.

ಜನಶಕ್ತಿಯ ಆತ್ಮವನ್ನು ಪುನರುಜ್ಜೀವಗೊಳಿಸುವ ಸಂಕಲ್ಪ

ಸಭೆಯ ಅಂತ್ಯದ ವೇಳೆ ಭಾಗವಹಿಸಿದವರು, EDSAಯನ್ನು ಸ್ಮರಿಸುವುದು ಕೇವಲ ಭೂತಕಾಲವನ್ನು ಗೌರವಿಸುವುದಕ್ಕಷ್ಟೇ ಅಲ್ಲ, ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆಯೂ ಹೌದು ಎಂಬುದನ್ನು ದೃಢಪಡಿಸಿದರು.

ಒಂದು ಗುಂಪಿನ ಅಭಿಪ್ರಾಯದಲ್ಲಿ, ಜನಶಕ್ತಿ ಚಳವಳಿ ಅನೇಕ ಸುಂದರ ನೆನಪುಗಳನ್ನು ಮೂಡಿಸಿದೆ; ಅದು ನಿರೀಕ್ಷೆಯ ಮೂಲವಾಗಿದ್ದು, ಫಿಲಿಪ್ಪೀನೋ ಜನರಲ್ಲಿರುವ ಉತ್ತಮ ಮಾನವೀಯತೆಯನ್ನು ಹೊರತಂದ ಕ್ಷಣವಾಗಿತ್ತು ಎಂದು ಅವರು ಹಂಚಿಕೊಂಡರು.

ಆದರೆ ಇದರ ಜೊತೆಗೆ ಮುಂದಿನ ಜವಾಬ್ದಾರಿಗಳನ್ನೂ ಅವರು ಗುರುತಿಸಿದರು. ಸತ್ಯವನ್ನು ಹೇಗೆ ಉಳಿಸಿಕೊಳ್ಳುವುದು, ಐಕ್ಯತೆಯನ್ನು ಹೇಗೆ ಕಾಪಾಡುವುದು, ನ್ಯಾಯವನ್ನು ಹೇಗೆ ರಕ್ಷಿಸಿ ಪುನರ್ ಸ್ಥಾಪಿಸುವುದು, ಹಾಗೂ ಧರ್ಮಸಭೆಯಾಗಿ ನಾವು ಹೇಗೆ ಬದುಕಬೇಕು ಎಂಬ ಪ್ರಶ್ನೆಗಳು ಸಭೆಯಲ್ಲಿ ಪ್ರತಿಧ್ವನಿಸಿತು.

ಪ್ರಾರ್ಥನೆ, ಸಂವಾದ ಮತ್ತು ಹಂಚಿಕೊಂಡ ಸ್ಮೃತಿಗಳ ಮೂಲಕ ರೋಮಿನ ಫಿಲಿಪ್ಪೀನೋ ಸಮುದಾಯವು ಸತ್ಯ, ನ್ಯಾಯ ಮತ್ತು ಐಕ್ಯತೆಯ ಮಾರ್ಗದಲ್ಲಿ ಮುಂದುವರಿಯುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು.

ನಲವತ್ತು ವರ್ಷಗಳ ನಂತರವೂ EDSA ಜನಶಕ್ತಿ ಕೇವಲ ಇತಿಹಾಸದ ಘಟನೆಯಲ್ಲ; ಅದು ಭಯಕ್ಕಿಂತ ಮನಸ್ಸಿನ ಧ್ವನಿಯನ್ನು ಆಯ್ಕೆಮಾಡುವ, ವಿಭಜನೆಗಿಂತ ಐಕ್ಯತೆಯನ್ನು ಆಯ್ಕೆಮಾಡುವ, ನಿರ್ಲಕ್ಷ್ಯಕ್ಕಿಂತ ವಿಶ್ವಾಸವನ್ನು ಆಯ್ಕೆಮಾಡುವ ಜೀವಂತ ಕರೆ ಆಗಿಯೇ ಉಳಿದಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

25 ಫೆಬ್ರವರಿ 2026, 11:31